ವಿಷಯಕ್ಕೆ ಹೋಗಿ

ವನಸುಂದರಿ

*ವನ ಸುಂದರಿ*
ವೈಶಿಷ್ಟ್ಯಗಳಿಗೆ ಮತ್ತೊಂದು ಹೆಸರು ಪ್ರಕೃತಿಯೆ ಇರಬೇಕು .
ಅದರಲ್ಲೂ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಅನನ್ಯ ವನರಾಶಿಯು ತನ್ನ ಗರ್ಭದೊಳಗೆ ಅಡಗಿಸಿಕೊಂಡ ಜೀವವೈವಿಧ್ಯ ಅತ್ಯಪೂರ್ವ.
ಅದೇ ಸಾಲಿನಲಿ ನಿಲ್ಲುವುದು ಸಹ್ಯಾದ್ರಿಯ ಇಬ್ಬನಿ ಹುಲ್ಲು .

*ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ ರಾಶಿರಾಶಿ ಮುತ್ತು* ಎಂಬ ಕವಿನುಡಿಗೆ ಸರಿಯಾಗಿ ಸುಂದರ ಹೂವೊಂದು ಇದೆ . ಅಚ್ಚ ನೀಲಿ ಒಂದಷ್ಟು ತಿಳಿ ನೇರಳೆ ಬಣ್ಣದ ಪುಟ್ಟಪುಟ್ಟ ಪಕಳೆಗಳನ್ನು ಹೊಂದಿರುವ ಈ ಗಿಡದಲಿ ಪಕಳೆಗಳ ಮೇಲೆ ವೆಲ್ವೆಟ್ ರೀತಿಯ ಕೂದಲುಗಳು ಇರುತ್ತವೆ . ಈ ಪಕಳೆಗಳ ತುದಿಗೆ ಪಾರದರ್ಶಕ ಎನಿಸುವ ಗುಳ್ಳೆಯ ರೀತಿಯ ರಚನೆಯೂ ಇರುತ್ತದೆ . ನೇರಳೆ ಬಟ್ಟೆಯ ಮೇಲೆ ಬಿಳಿ ಮುತ್ತಿನ ಕಸೂತಿ ಅಲಂಕಾರ ನೋಡಿದ ಹಾಗೆ ಭಾಸವಾಗುತ್ತದೆ .
ಕಡು ಹಳದಿ ಬಣ್ಣದ ಆರು ಕೇಸರಗಳನ್ನು ಹೊಂದಿರುತ್ತದೆ.
ನಯವಾದ ಕೂದಲಿನ ರಚನೆ ಹೊಂದಿರುವುದರಿಂದ ಇದನ್ನು ಬೆಕ್ಕಿನ ಕಿವಿ ಯ ಹೂ ಎಂದು ಕರೆಯುತ್ತಾರೆ.

*ಸೈಯಾನೋಟಿಸ್ ಟ್ಯುಬರೋಸ ಎಂದು ವೈಜ್ಞಾನಿಕವಾಗಿ ಕರೆಸಿಕೊಳ್ಳುವ ಈ ಹೂವನ್ನು ಆಸ್ಟ್ರಿಯಾ ದೇಶದ ಸಸ್ಯಶಾಸ್ತ್ರಜ್ಞ
ಜೂಲಿಯಸ್ ಹರ್ಮನ್ ಶಲ್ಟ್ ಸಹ್ಯಾದ್ರಿಯ ತಪ್ಪಲಲಿ ಕಂಡು ಹಿಡಿದಿದ್ದಾನೆ . ಹಾಗಾಗಿ , ಸಯಾನೋಟಿಸ್ ಸಹ್ಯಾದ್ರಿಕಾ ಎಂದು ಕರೆಯುತ್ತಾರೆ .
Commilineceae ( ಕಾಮಿಲಿನೇಸಿ ) ಕುಟುಂಬಕ್ಕೆ ಸೇರುವ ಈ ಹೂವು ,ಏಕದಳ ಸಸ್ಯವಾಗಿದ್ದು , commilinales ಕಾಮಿಲಿನೇಲ್ ವರ್ಗಕ್ಕೆ ಸೇರುತ್ತದೆ.
ಮರಾಠಿಯಲ್ಲಿ ಅಭಾಳಿ ಎಂದೂ , ತಮಿಳಿನಲ್ಲಿ ವಾಲುಕೈಕಿಜಂಗೂ ಎಂದು , ಕನ್ನಡದಲ್ಲಿ ಕನ್ನೆ ಹೂ ಎನ್ನುತ್ತಾರೆ .

ಇದು ದಪ್ಪದಾದ , ಮಡಚಿಕೊಂಡಂತ ಎಲೆಗಳನ್ನು ಹೊಂದಿರುತ್ತದೆ . 15-90cm ನಷ್ಟು ಉದ್ದಕ್ಕೆ ಬೆಳೆಯುತ್ತದೆ. ಹೂವು ಸೈಮ್ ರೀತಿಯ ಗೊಂಚಲಲ್ಲಿ ಹೂ ಬಿಡುತ್ತದೆ. ಈ ಹೂವಿಗೆ ತೊಟ್ಟು ಇರುವುದಿಲ್ಲ , ನೇರವಾಗಿ ಕಾಂಡದಿಂದಲೇ ಬೆಳೆದಿರುತ್ತದೆ. . ಈ ಹೂವಿನಲ್ಲಿ ಮಕರಂದ ಇರುವುದಿಲ್ಲ . ಆದರೂ
ಆಕರ್ಷಕ ಬಣ್ಣ , ಚಹರೆಯಿಂದ ಗಮನ ಸೆಳೆಯುತ್ತದೆ ಈ ಪುಟ್ಟ ಹೂ .

ಮೇ ಅಂತ್ಯ , ಒಮ್ಮೊಮ್ಮೆ ಆಗಸ್ಟ್ ನಿಂದ ಸೆಪ್ಟೆಂಬರ್ ವರೆಗೆ ಹೂ ಬಿಡುವ ಕಾಲ . ತುಂಬ ಅಪರೂಪದ ಹೂವು ಆದರೂ ನಮ್ಮ ಹಿರಿಯರಿಗೆ ಇದರ ಹಲವು ಉಪಯೋಗಗಳು ಗೊತ್ತಿದ್ದವು. ಡಯಾಬಿಟಿಸ್ ಹಾಗು ಕೆಮ್ಮು ,ಅಸ್ತಮಕ್ಕೆ ಔಷಧಿಯಾಗಿ ಈ ಹೂವನ್ನು ಬಳಸುತ್ತಿದ್ದರು.
ಇದು ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಅಳಿವಿನಂಚಿಗೆ ಬಂದಿರುವ ಸಸ್ಯ . ಅಕೇಶಿಯಾ , ನೀಲಗಿರಿ ನೆಡುತೋಪುಗಳಿಂದ , ಹೆಚ್ಚುತ್ತಿರುವ ಕಾಫೀ ಪ್ಲಾಂಟೇಷನ್ ಗಳಿಂದ ಇದರ ಮೂಲ ಆವಾಸಕ್ಕೆ ಧಕ್ಕೆ ಬಂದು ಅಳಿವಿನ ಹಾದಿ ಹಿಡಿದಿದೆ.

ಕರ್ನಾಟಕ , ತಮಿಳುನಾಡು , ಒರಿಸ್ಸಾ , ಮಹಾರಾಷ್ಟ್ರದ ಕೆಲ ಭಾಗಗಳು , ಪೂರ್ವ ಹಿಮಾಲಯದಲ್ಲಿ ಈ ಹೂವು ಕಂಡು ಬರುತ್ತಿದೆ . ಅಪರೂಪದ ಈ ಹೂವನು ನೋಡಿದವರೂ ಬಹಳ ಕಮ್ಮಿ .

ನಿಸರ್ಗ ನಮಗೆ ನೀಡಿರುವ ಇಂತಹ ಸುಂದರ ಉಡುಗೊರೆಗಳನ್ನು ನಾವು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ದುರಂತ . ನೋಡಿದ ತಕ್ಷಣ ವಾಹ್ ..‌ಎನಿಸುವ ಈ ಚೆಲುವೆಯ ನೋಡಿದ ಮೇಲೆ ಅವಳನ್ನು ಹುಡುಕದೇ ಇರಲಾಗಲಿಲ್ಲ .

ಬರಹ : ಕಾವ್ಯ ಎಸ್ ಕೋಳಿವಾಡ್
ಚಿತ್ರ : ವಿನೋದ್ ಕುಮಾರ್ ಸರ್ ‌

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...