ವಿಷಯಕ್ಕೆ ಹೋಗಿ

ಕೊಳಲನೂದಿದ

ಕಥೆ : ಕೊಳಲನೂದಿದ
ಪುಸ್ತಕ : ಎಚ್ಚರದ ಕನಸು
ಲೇಖಕರು : ವೀಣಾ ಬನ್ನಂಜೆ

ಹೌದಪ್ಪಾ ಹೌದೋ ನೀನೇ ದೇವರ...
ನಿಂದ ನೀ ತಿಳಿದರ ನಿನಗಿಲ್ಲೋ ದೂರ ...
ಷರೀಫರ  ಈ ಹಾಡು ಇವತ್ತು ಯಾಕೋ ಬಹಳ ನೆನಪಾಗ್ತಿದೆ .

ನಿದ್ದಿಯೊಳಗೂ ಸದಾ ಎಚ್ಚರವಿರಬೇಕು
ಸೆರೆ ಕುಡಿಯದೇ ನಶೆ ಹತ್ತಿರಬೇಕು
ಅಂತ ಮುಂದುವರಿಯುತ್ತೆ . ಎಚ್ಚರದಲ್ಲಿದ್ದಾಗ ಕನಸು ಬೀಳದು.  ಬಿದ್ದರೂ ಅದು ಕನಸೇ ಅಲ್ಲ.

ಇಂದು ವೀಣಾ ಬನ್ನಂಜೆಯವರ ಕಥಾ ಸಂಕಲನ " ಎಚ್ಚರದ ಕನಸು " ಓದಿ ಮುಗಿಸಿದೆ. ಒಂದೇ ಓದಿಗೆ ದಕ್ಕದ ಬರಹಗಳವು. ಆದರೆ ಒಂದೊಂದು ಬಾರಿ ಓದಿದಾಗಲೂ ಸಹ ಒಂದೊಂದು ಹೊಳಹು ನೀಡಬಲ್ಲ ಕಥೆಗಳು .

ಕೇವಲ ಕಥೆ ಅನ್ನುವುದಾ ಇದಕ್ಕೆ ...? ಒಮ್ಮೊಮ್ಮೆ ನನ್ನದೇ ಮನದ ಬಿಕ್ಕಳಿಕೆ ,
ನಾನು ಕಲ್ಪಿಸಿಕೊಂಡ  ಭಾವನೆಗಳ ಹುಚ್ಚು ಲೋಕವ ಮೀರಿ ಹೊರಬರುವ ತುಡಿತ , ಕನವರಿಕೆಗಳು ಒಂದೇ ಬಾರಿಗೆ ವ್ಯಾಮೋಹದ ಹುಚ್ಚು ಹೊಳೆಯಲ್ಲಿ ತೇಲಿಹೋಗುವಾಗ ಸಿಕ್ಕ ಆಸರೆಯಂತಾದ ಹುಲ್ಲುಕಡ್ಡಿಯಂತೆ .
ನನ್ನನು ನಾನು ಕಲ್ಪಿಸಿಕೊಂಡ ಊಹಾಪ್ರಪಂಚ ಎಷ್ಟು ಸೂಕ್ಷ್ಮ , ಥೇಟ್ ಗಾಜಿನಂತೆ .ಅದನ್ನು ಒಡೆಯುವ ಕಲ್ಲಿನಂತೆ ಈ ಬರಹ ಎಂದರೆ ತಪ್ಪಾಗಲಿಕ್ಕಿಲ್ಲ.
         ಇಲ್ಲಿ ಬರುವ ನಿರೂಪಕಿಯ ಅಪ್ಪ , ಅವಳ ಗುರು ,  ಅವಳ ಆತ್ಮಸಖ , ಎಲ್ಲವೂ ಆದ ಅವನು ಹೇಳಿದ ಮಾತುಗಳು ಇನ್ನೂ ಮನದಲ್ಲಿ ಆವರಿಸುತಿದೆ.
   "  ಮಗೂ, ನಿನ್ನ ದುರ್ಬಲ ಕೋಶದೊಳಗೊಂದು ಗಟ್ಟಿ ವಜ್ರದ ಕೂಸಿದೆ. ಆ ಕೋಶ ಹರಿಯುವುದಷ್ಟೇ ನನ್ನ ಕೆಲಸ ."
        ಒಮ್ಮೆ ಅಂತರ್ಮನನ ಮಾಡಿಕೊಂಡರೆ ನಾವೆಲ್ಲರೂ ಆ ಗಟ್ಟಿ ವಜ್ರದ ಕೂಸನ್ನೇ ಹುಡುಕುತ್ತಾ ಜೀವನ ಕಳೆಯುತ್ತೇವೆ . ಅದು ನಮ್ಮೊಳಗೆ ಇರುವುದು ಮರೆತೆ ಹೋಗಿರುತ್ತದೆ.

ಕವಲೊಡೆದ ಹಾದಿಗಳು , ಕವಿದಿಹುದು ಕತ್ತಲೆಯು , ಮನವೇ ಬಲುಜೋಕೆ . ಎಂದು ಎಚ್ಚರಿಸುತ್ತಲೇ ಸಾಗುತ್ತದೆ ಕಥೆ .

ಅಜ್ಞಾನದ ಪೊರೆಯೊಳಗೆ ಸಿಲುಕಿರುವ  ಅಂತರ್ಶಕ್ತಿಯನ್ನು , ಅಂತರಚೇತನವನು ಬಡಿದೆಬ್ಬಿಸುವ ಕೂಗು ಅದು. ಆ ಅಜ್ಞಾನದ ಪೊರೆ ಹರಿಯುವುದು ತನಗಿಂತ ಭಿನ್ನ ನಾದವನಿಗೆ ಮಾತ್ರ ಸಾಧ್ಯ ಅನ್ನೋದು ಇಲ್ಲಿ ಅಭಿವ್ಯಕ್ತಗೊಂಡಿದೆ ‌.

ಕೃಷ್ಣನಿಂದ ಮೊದಲು ದೇಹಸುಖಕೆ ಮನಸು ಸ್ಪಂದಿಸಿದರೂ ಸಹ , ಸ್ಪಂದಿಸಬೇಕಾದದ್ದು ಮನಸು ದೇಹವಲ್ಲ. ಎಂದು ಎಚ್ಚರಿಸುತ್ತಾನೆ ‌ .
ಅವಳ ಮಡಿಲ ಮಗುವಾಗಿ , ಕಾಳಜಿ ತೋರುವ  ತಂದೆಯಾಗಿ , ಅವಳ ಸಖನಾಗಿ , ಕೊನೆಗೆ ಆತ್ಮಸಖನೂ ಆಗಿಬಿಡುತ್ತಾನೆ .

ಸೋತು ಬಂದೆನೋ ಗುರುವೇ ನಿನ್ನ ಬಳಿಗೇ
ಸೋತ ಜೀವವನಾತುಕೋ ಒಂದು  ಘಳಿಗೆ
ಎನ್ನುತಾ ಆತ್ಮ ಸಮರ್ಪಣೆ ಮಾಡುತ್ತಾಳೆ .

ಮೊದಲು ಹೊರಗಿರುವವರಿಗೆ ನಿನ್ನನು ತೋರುವುದನು ನಿಲ್ಲಿಸು , ತೋರಿಕೆ ಅವಸಾನಕೆ ಮೂಲ ಅಂತ  ಕೃಷ್ಣ ಅವಳಿಗೆ ಹೇಳುವ ಮಾತುಗಳು ಪ್ರತಿಯೊಬ್ಬ ಓದುಗನಿಗೂ ಹೇಳಿದಂತೆ ಆಗುತ್ತದೆ.

ಹೇಳಬೇಕಾದದ್ದನ್ನು ಬೇರೆಯದೇ ರೀತಿಯಲ್ಲಿ ಹೇಳುತ್ತಾ ಹೋಗಿ , ಅದನ್ನು ಅರ್ಥದ ಪರಿಧಿಗೆ ಸಿಲುಕಿಸದಂತಹ ಕಥೆ ಕೊಳಲನೂದಿದ .

ಕಥೆ ಕಟ್ಟುವ ಶೈಲಿ ಬಹು ವಿಭಿನ್ನ . ಪದಗಳೊಳಗೆ ಗೂಢಾರ್ಥವನಿಟ್ಟು ಬರೆದಿರುವುದರಿಂದ ಹೊಸ ಓದುಗನಿಗೆ ತಕ್ಷಣ ಅರ್ಥವಾಗುವುದಿಲ್ಲ. ಕುವೆಂಪುರವರ ಥರ ಸ್ವಪ್ನಾ ಪ್ರಪಂಚವನ್ನು ಸಮರ್ಥವಾಗಿ ಆಧ್ಯಾತ್ಮಿಕ , ವೈಜ್ಞಾನಿಕ , ಕಾವ್ಯಗಳ ದಿವ್ಯ ಸಂಗಮವನ್ನಾಗಿ ಮಾಡಿದ್ದಾರೆ . ವೀಣಾ ಬನ್ನಂಜೆಯವರು.
ಈ ಓದಿನ ಹ್ಯಾಂಗೋವರ್ ನಿಂದ ಹೊರ ಬಂದಿಲ್ಲ ಇನ್ನೂ............

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...

ಸಿಹಿ ನೆನಪಿನ ಸಂಚಿ

ನೀ ನನ್ನ ಸ್ವಂತ ಎಂಬ ಕನವರಿಕೆಯಲಿ ನೀನೀಗ ನನ್ನ ಜೊತೆಯಿಲ್ಲ ಎಂಬ ಕನಲಿಕೆಯೂ ಇದೆ ಈ ಕನಲಿಕೆ, ಕನವರಿಕೆಗಳ ನಡುವಲೂ ಒಂದು ಸಿಹಿಸುಖದ ಉಲುಹು ಇದೆ ಅದು ಸದಾ ನಿನ್ನನೇ ನೆನಪಿಸುತ್ತಿದೆ.